ಶ್ರೀಮಠವು ತನ್ನ ಸುತ್ತಮುತ್ತಲಿನ ಬೇಡ, ಕಾಡ ಜನರನ್ನು ಒಕ್ಕಲುತನ ಮಾಡಲು ಪ್ರೋತ್ಸಾಹಿಸಿದ ಮಠ. ಹೀಗಿರುವಾಗ ಶ್ರೀಮಠವು ಕೂಡ ಪ್ರಾರಂಭದಿಂದಲೂ ಕೃಷಿ ಕಾಯಕವನನ್ನು ಪಾಲಿಸಿಕೊಂಡು ಬರುತ್ತಲಿದೆ. “ಅನ್ನಂ ಪರಬ್ರಹ್ಮ” ಎಂಬ ಲೋಕೋಕ್ತಿಯಂತೆ ಶ್ರೀಮಠಕ್ಕೆ ಬರುವ ಭಕ್ತಾದಿಗಳು ಪ್ರಸಾದ ಸ್ವೀಕರಿಸಿಯೇ ಹೋಗಬೇಕೆಂದು ದಾಸೋಹದ ವ್ಯವಸ್ಥೆಯನ್ನು ಆದಿಕಾಲದಿಂದಲೂ ಮಾಡಿಕೊಂಡು ಬರುತ್ತಲಿದೆ. ಹೊರಗಿನ ಹಳ್ಳಿಗಳಿಗೆ ಹೋಗಿ ವರ್ಷಕ್ಕೊಮ್ಮೆ ಕ್ವಾರಣ್ಯ ಭಿಕ್ಷೆ ಮಾಡಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಬರುತ್ತಿದ್ದರು. ಮುಂದೆ ಭಕ್ತಾದಿಗಳು ಮತ್ತು ವಿದ್ಯಾರ್ಥಿನಿಲಯದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದುದರಿಂದ ಕೃಷಿ ಭೂಮಿಯನ್ನು ವಿಸ್ತರಿಸಿ ಹೆಚ್ಚು ವ್ಯವಸಾಯ ಮಾಡಲು ಮಠ ಮುಂದಾಯಿತು. ಬಹುತೇಕ ಶ್ರೀಮಠದ ಜಮೀನಿನಲ್ಲಿ ಬೆಳೆದ ಧಾನ್ಯದಲ್ಲೇ ಮಠದ ದಾಸೋಹ ಮುಂದುವರಿಯುವಂತಾಯಿತು. ಶ್ರೀಮಠದಲ್ಲಿ ವ್ಯಾಸಂಗದ ಜೊತೆಗೆ ವಿದ್ಯಾರ್ಥಿಗಳಿಗೆ ಕೃಷಿ ಕಾಯಕ ತತ್ವವು ಕಲಿಯುವಂತೆ ರಜಾ ದಿನಗಳಲ್ಲಿ ಮಠದ ಜಮೀನಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸುತ್ತಾ ಕೃಷಿಯ ಪರಿಚಯವನ್ನು ಮಾಡಿಕೊಡುತ್ತಿದ್ದರು.
ಶ್ರೀಮಠದ ಜಮೀನಿನಲ್ಲಿ ರಾಗಿ, ಜೋಳ, ಅವರೆ, ಸಾಸಿವೆ, ಹುಚ್ಚೆಳ್ಳು, ಸಾಮೆ, ನವಣೆ, ಹಾರಕ, ಮುಂತಾದ ಧಾನ್ಯಗಳನ್ನು ಬೆಳೆಯುವುದರ ಜೊತೆಗೆ ವಾಣಿಜ್ಯ ಬೆಳೆಗಳಾದ ಅರಿಸಿನ ಸೂರ್ಯಕಾಂತಿಗಳನ್ನು ಸಹ ಬೆಳೆಯಲಾಗುತ್ತದೆ. ಕ್ರಮೇಣ ಸಿರಿಧಾನ್ಯಗಳಾದ ಸಾಮೆ, ನವಣೆ, ಹಾರಕ ಮುಂತಾದ ಧಾನ್ಯಗಳನ್ನು ಬೆಳೆಯುವುದು ಕಡಿಮೆಯಾಗಿ ಕೇವಲ ರಾಗಿ ಮತ್ತು ಇತರೆ ಧಾನ್ಯಗಳನ್ನು ಬೆಳೆಯುವಂತಾಯಿತು. ಆದರೂ ಪ್ರಸ್ತುತ ಇರುವ ಶ್ರೀಶಾಂತಮಲ್ಲಿಕಾರ್ಜುನಸ್ವಾಮಿಗಳ ಒಲವಿನಿಂದ ಹಿಂದಿನ ಆಹಾರಪದ್ಧತಿ, ಇಂದಿನ ಜನಾಂಗಕ್ಕೆ ಅಗತ್ಯವೆಂಬುದನ್ನು ಮನಗಂಡು ಮತ್ತೆ ಮಠದ ಜಮೀನಿನಲ್ಲಿ ಸಿರಿಧಾನ್ಯವನ್ನು ಬೆಳೆಯುವ ಪರ್ವಕ್ಕೆ ನಾಂದಿ ಹಾಡಿರುವುದು ವಿಶೇಷವಾಗಿದೆ.
ಶ್ರೀ ಸಾಲೂರು ಮಠದ ಇತಿಹಾಸ
೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಶರಣ ಕ್ರಾಂತಿಯ ನಂತರ ಬಹುತೇಕ ಶರಣರು ಕರ್ನಾಟಕದಾದ್ಯಂತ ಚದುರಿ ಹೋದರು. ೧೩ ಮತ್ತು ೧೪ನೇ ಶತಮಾನದ ಪ್ರಾರಂಭದಲ್ಲಿ ಶರಣಧರ್ಮ ಹೆಚ್ಚೂ ಕಡಿಮೆ ಬೂದಿಮುಚ್ಚಿದ ಕೆಂಡದಂತೆಯೇ ಇತ್ತು. ಮುಂದುವರೆದು ಹೇಳುವುದಾದರೆ ದಕ್ಷಿಣದ ಕಡೆ ಶರಣಧರ್ಮ ಅಷ್ಟೇನೂ ಪ್ರಚಲಿತದಲ್ಲಿ ಇರಲಿಲ್ಲ. ದಕ್ಷಿಣದ ಬಹುತೇಕ ಭಾಗಗಳಲ್ಲಿ ಜೈನ ಧರ್ಮ ಅಸ್ತಿತ್ವದಲ್ಲಿತ್ತು. ಮಲೆಯೂರು, ಕನಕಗಿರಿ, ಬಸ್ತೀಪುರ, ಒಡೆಯರಪಾಳ್ಯ ಮುಂತಾದ ಭಾಗದಲ್ಲಿ ಜೈನ ಧರ್ಮ ತನ್ನ ಪ್ರಭಾವವನ್ನು ಬೀರಿತ್ತು. ಇದೇ ಸಂದರ್ಭದಲ್ಲಿ ಜೈನ ಮುನಿಯಾದ ಭಾನುಕೀರ್ತಿ ಈಗಿನ ಒಡೆಯರ ಪಾಳ್ಯದ ಬಳಿ ಇರುವ ಬಂಕಾಪುರಿ ಎಂಬ ಊರನ್ನು ರಾಜಧಾನಿ ಮಾಡಿಕೊಂಡು ಚಾಮರಾಜನಗರ ಭಾಗದಲ್ಲಿ ತನ್ನ ಆಳ್ವಿಕೆ ಮಾಡುತ್ತಿದ್ದನಲ್ಲದೆ; ಶರಣ ಪರಂಪರೆಗೆ ಸೇರಿದವರನ್ನು ಮತ್ತು ಶರಣಧರ್ಮವನ್ನು ಪ್ರಚಾರ ಮಾಡುತ್ತಿದ್ದವರನ್ನು ಹಿಡಿದು ಹಿಂಸೆಗೆ ಒಳಪಡಿಸುತ್ತಿದ್ದನು. ಮೂಲತಃ ಜೈನ ಧರ್ಮೀಯನಾದ ಈತ ತನ್ನ ಕ್ರೂರ ಬುದ್ಧಿಯಿಂದ ಈ ಭಾಗದಲ್ಲಿ ಕುಖ್ಯಾತನಾಗಿದ್ದನು. ಹಾಗಂತ ಈ ಭಾಗದಲ್ಲಿ ವೀರಶೈವ ಲಿಂಗಾಯತ ಪರಂಪರೆಯ ಶರಣರು ಗಣನೀಯವಾಗಿ ಇರಲಿಲ್ಲ ಎಂದರ್ಥವಲ್ಲ. ಶ್ಯಾಗ್ಯದ ನೀಲಕಂಠಪ್ಪ, ಅಲಗುಮೂಲೆ ಮಲ್ಲಿಕಾರ್ಜುನ, ತಮ್ಮನಾಚಿಯ ತ್ರಿಯಂಬಕ ದೇವರು, ಗಾಜನೂರಿನ ಸೋಮೇಶ್ವರ, ಮೀಣ್ಯಾದ ಬಸವೇಶ್ವರ, ಪೊನ್ನಾಚಿಯ ಪೊನ್ನಮಲ್ಲೇಶ ಇವರೇ ಮುಂತಾದ ಶರಣರು, ಶರಣರ ತತ್ವದ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಈ ಭಾನುಕೀರ್ತಿಯ ದೆಸೆಯಿಂದಾಗಿ ತಟಸ್ಥವಾಗಿದ್ದರು. ಒಂದು ಮೂಲದ ಪ್ರಕಾರ ಇವರನ್ನೆಲ್ಲಾ ಭಾನುಕೀರ್ತಿ ಮಹಾರಾಜ ತನ್ನ ಸೆರೆಯಲ್ಲಿಟ್ಟಿದ್ದು ; ಮುಂದೆ ಮಹಾದೇಶ್ವರರು ಬಂದು ಸೆರೆಯಿಂದ ಮುಕ್ತಿಗೊಳಿಸಿದರು ಎಂದು ಹೇಳುವುದುಂಟು. ಅಂದಹಾಗೆ ಈ ಭಾನುಕೀರ್ತಿಯೆ ಕಾವ್ಯ ಪರಂಪರೆಯಲ್ಲಿ ಹೇಳುವ ಶ್ರವಣ ದೊರೆ.
ಇನ್ನು ಪೂರ್ವದ ಕಡೆ ಗಮನಿಸುವುದಾದರೆ ಬೇಡಗಂಪಣ ಬುಡಕಟ್ಟಿಗೆ ರಾಜನಾಗಿದ್ದ ರಾಯಣ್ಣನು ಆಲಂಬಾಡಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ಮಾಡುತ್ತಿದ್ದನು. ಹೇಳಿಕೊಳ್ಳುವಂತಹ ವಿಶಾಲ ಸಾಮ್ರಾಜ್ಯ ಇವನದಾಗಿರದಿದ್ದರೂ ಕೂಡ ಈ ಭಾಗದಲ್ಲಿ ತನ್ನ ಅಧಿಕಾರ ಸ್ಥಾಪಿಸಿದ್ದನು. ಜುಂಜೇಗೌಡ ಮುಂತಾದವರು ಇವನಿಗೆ ಹತ್ತಿರದವರಾಗಿದ್ದರು. ಇದೇ ಕಾಲಘಟ್ಟದಲ್ಲಿ ಮಹಾದೇಶ್ವರಬೆಟ್ಟದ ಪೂರ್ವದ ಭಾಗ ಕೊಂಗದೊರೆಗಳಿಂದ ಆಳಿಸಿಕೊಳ್ಳುತ್ತಿತ್ತು. ಈ ಕೊಂಗ ದೊರೆಗಳೆಂದರೆ ಚೋಳದೊರೆಗಳು. ಕೆಲ ಇತಿಹಾಸಕಾರರು ಈ ಚೋಳ ದೊರೆ ಸತ್ಯೇಂದ್ರಚೋಳ ಇದೇ ರಾಯಣ್ಣನ ಮಗಳಾದ ದೇವಕಿಯನ್ನು ಬಯಸಿದ್ದು ; ಮಗಳನ್ನು ಕೊಡಲು ನಿರಾಕರಿಸಿದ ಬೇಡಗಂಪಣ್ಣರ ದೊರೆ ರಾಯಣ್ಣನ ಮೇಲೆ ದಂಡೆತ್ತಿ ಬಂದಾಗ ಮಹಾದೇಶ್ವರರು ಕೊಂಗದೊರೆಗೆ ಬುದ್ದಿ ಕಲಿಸಿ ರಾಯಣ್ಣನನ್ನು ಪಾರು ಮಾಡಿದ್ದರು ಎಂದೂ ಹೇಳುತ್ತಾರೆ.
ಶ್ರೀ ಸಾಲೂರು ಮಠದ ಸುತ್ತಮುತ್ತಲಿನ ಕೊಕ್ಕಬರೆ, ಕೊಂಬುಡಿಕ್ಕಿ, ಮಾರಿಹೊಲ, ದೊಡ್ಡಾಣೆ, ಹಳೇಯೂರು, ಪೊನ್ನಾಚಿ, ಆಲಂಬಾಡಿ, ಬೇವಿನ ಹಟ್ಟಿ, ಮುಂತಾದ ಪ್ರದೇಶಗಳಲ್ಲಿ ಅಲ್ಲಲ್ಲಿ ಕಾಡು ಸೋಲಿಗರು, ಕೊಂಗರು, ಬೇಡಗಂಪಣರು ಮತ್ತಿತರರು ಪೋಡುಗಳನ್ನು ಮಾಡಿಕೊಂಡು ಬೇಟೆಯಾಡಿ ಮಾಂಸಹಾರ ಸೇವಿಸಿಕೊಂಡು ತಿರುಗಾಡಿಕೊಂಡಿದ್ದರು. ಜೊತೆಗೆ ಹಲವಾರು ಕಾಡುದೇವತೆಗಳನ್ನು ಪೂಜಿಸಿಕೊಂಡು ಇನ್ನಿಲ್ಲದ ಗೊಡ್ಡು ನಂಬಿಕೆಗಳೊಂದಿಗೆ ಮೌಢ್ಯ ಬೆಳೆಸಿಕೊಂಡು ಪ್ರಾಣಿಗಳಿಗಿಂತ ಕಡೆಯಾಗಿ ಜೀವನ ನಡೆಸುತ್ತಿದ್ದರು. ಬಹುತೇಕ ಹೊರಜಗತ್ತಿನ ನಂಟಿಲ್ಲದೆ ಇದು ಕತ್ತಲ ರಾಜ್ಯ ಎನ್ನಿಸಿಕೊಂಡಿತ್ತು. ಹುಲಿ, ಚಿರತೆ, ಕಾಡೆಮ್ಮೆ, ದೊಣ್ಣಾಯಿ ಮುಂತಾದ ಕಾಡುಪ್ರಾಣಿಗಳಿಂದ ಸಮೃದ್ದಿಯಾಗಿತ್ತು. ಪರಸ್ಪರ ಸಹಕಾರವಿರದ ಈ ಕಾಡು ಸೋಲಿಗರು ತಮ್ಮ ತಮ್ಮ ಗುಂಪುಗಳಲ್ಲಿ ಹೊಡೆದಾಡಿಕೊಂಡು ಅಲೆಯುತಿದ್ದರು. ಇದೇ ಸಮಯದಲ್ಲಿ ಈ ಭಾಗದಲ್ಲಿ ಮುಪ್ಪಿನ ಸ್ವಾಮಿಗಳು ಎಂಬಾತರು ಪರ್ಣಶಾಲೆಯನ್ನು ಮಾಡಿಕೊಂಡು ತಮ್ಮ ಮಿತಿಯಲ್ಲಿ ಸಾಧ್ಯವಾದಷ್ಟು ಕಾಡು ಜನರಿಗೆ ಮಾರ್ಗದರ್ಶನ ಮಾಡುತ್ತಾ, ತಪಸ್ಸನ್ನಾಚರಿಸುತ್ತಾ, ಬಿಡುವಿದ್ದಾಗ ತಮಿಳುನಾಡಿನಲ್ಲಿ ಸಂಚರಿಸುತ್ತಾ ಕಾಲ ಕಳೆಯುತಿದ್ದರು. (ಮುಂದೆ ಈ ಪರ್ಣಶಾಲೆಯೇ ಮಹಾದೇಶ್ವರ ಮತ್ತು ಸಂಸಾರಿ ಸಂಗಪ್ಪನವರ ಪರಿಶ್ರಮದಿಂದ ಮಠವಾಗಿ ರೂಪುಗೊಂಡಿತು). ಸನ್ನಿವೇಶ ಹೀಗಿರುವಾಗ ಈ ಭಾಗದ ಜನರನ್ನು ಉದ್ದರಿಸಲೇನೋ ಎಂಬಂತೆ, ಈ ಜಾಗವನ್ನು ಜಗತ್ತು ಕೊಂಡಾಡುವಂತೆ ಮಾಡಲು, ಸರಿಯಾಗಿ ಇಂಥಾ ಸಮಯದಲ್ಲೇ ಈ ಪ್ರದೇಶಕ್ಕೆ ಉತ್ತರದಿಂದ ಬಂದ ಮಹದೇಶ್ವರರು ಕಾಲಿಟ್ಟರು. ಇದು ಮಠ ಸ್ಥಾಪನೆಯ ಹಿನ್ನೆಲೆ.
೧೨ನೆಯ ಶತಮಾನದಲ್ಲಿ ಶರಣರು ದೇಶದ ಮೂಲೆಮೂಲೆಗೆ ಚದುರಿ ಹೋಗಿದ್ದು ಈಗಾಗಲೇ ಗೊತ್ತಿರುವ ವಿಚಾರ. ಹೀಗೆ ಚದುರಿದ್ದ ಶರಣರಲ್ಲಿ ಒಬ್ಬರು ಈ ಕರ್ನಾಟಕದ ದಕ್ಷಿಣ ಭಾಗಕ್ಕೆ ಬಂದು ನಡುಮಲೆಯಲ್ಲಿ ನೆಲೆಸಿದ್ದಿರಬಹುದು. ಈ ಶರಣರ ದಾರಿಯನ್ನು ಅನುಸರಿಸಿದ ಕಿರಿಯ ಶಿಷ್ಯರು ಅವರ ಹಿಂದೆ ಬಂದಿರಬಹುದು. ಹೀಗೆ ಮುಪ್ಪಿನ ಸ್ವಾಮಿಗಳು ನಡುಮಲೆಗೆ ಬಂದು ಪರ್ಣ ಶಾಲೆಯನ್ನು ಸ್ಥಾಪಿಸಿಕೊಂಡು ಕರ್ನಾಟಕ, ತಮಿಳುನಾಡು ಸೇರಿದಂತೆ ಈ ಭಾಗದಲ್ಲಿ ಹಲವು ಭಕ್ತರನ್ನು ಸಂಪಾದಿಸಿ ತಪಸ್ಸನ್ನು ಆಚರಿಸಿಕೊಂಡು ಇದ್ದರು. ಬಹುಶಃ ಈ ಸ್ವಾಮಿಗಳಿಗೆ ತುಂಬಾ ವಯಸ್ಸಾಗಿದ್ದರಿಂದಲೋ ಏನೋ ಮುಪ್ಪಿನ ಸ್ವಾಮಿಗಳು ಎಂದು ಜನರು ಕರೆದಿರಬಹುದು. ಇವರ ಮೂಲ ಹೆಸರು ತಿಳಿದಿಲ್ಲ. ಯಾಕೆಂದರೆ ಮಹದೇಶ್ವರರು ಈ ನಡುಮಲೆಯ ಪರ್ಣಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇವರು ತಮಿಳುನಾಡಿನ ಕಡೆ ಪ್ರವಾಸ ಹೋಗಿರುತ್ತಾರೆ. ಎರಡನೇ ಭೇಟಿಯಲ್ಲಿ ಇವರು ಮಹದೇಶ್ವರರಿಗೆ ಮುಖಾಮುಖಿಯಾಗುತ್ತಾರೆ. ಅಷ್ಟೊತ್ತಿಗಾಗಲೇ ಮಹದೇಶ್ವರರು ಈ ಭಾಗದಲ್ಲಿ ತಮ್ಮ ವ್ಯಕ್ತಿತ್ವದ ಪ್ರಭಾವ ಬೀರಿ ಜನಮಾನಸದಲ್ಲಿ ಹೆಸರುವಾಸಿಯಾಗಿರುತ್ತಾರೆ. ಎಲ್ಲರೂ ಸೇರಿ ಅದೇ ಪರ್ಣಶಾಲೆಯನ್ನು ದಾಸೋಹ ಮಠವನ್ನಾಗಿ ಮಾಡುತ್ತಾರೆ. ನಂತರ ಮಹದೇಶ್ವರರು ಮತ್ತು ಸಂಸಾರಿ ಸಂಗಪ್ಪನವವರು ಕುಂತೂರಿನಿಂದ ಮಹದೇಶ್ವರರನ್ನು ಹುಡುಕಿಕೊಂಡು ಬಂದಂತಹ ಸಾಲೂರು ಸ್ವಾಮಿಗಳನ್ನು ಶ್ರೀಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ. ಮುಪ್ಪಿನ ಸ್ವಾಮಿಗಳಿಂದ ಪ್ರಾರಂಭವಾದ ಈ ಸ್ಥಳ ಮುಂದೆ ಎಂದೂ ಮುಪ್ಪಾಗದಿರಲಿ ಎಂದು ಮುಪ್ಪಿನ ಸ್ವಾಮಿಗಳ ನೇತೃತ್ವದಲ್ಲಿ ಮಠಕ್ಕೆ ಮುಹೂರ್ತ ಸ್ತಂಭವನ್ನು ನೆಡುತ್ತಾರೆ. ಈ ಜಾಲದ ಮರದ ಕವೆಯನ್ನು ಈಗಲೂ ಶ್ರೀಮಠದಲ್ಲಿ ಕಾಣಬಹುದಾಗಿದೆ. ಶ್ರೀ ಸಾಲೂರು ಸ್ವಾಮಿಗಳನ್ನು ಅಲ್ಲೇ ನೆಲೆಸುವಂತೆ ಮಾಡಿದುದ್ದಲ್ಲದೆ ಅಲ್ಲಿನ ಕಾಡು ಸೋಲಿಗರಿಗೆ, ಆಲಂಬಾಡಿ ದೊರೆ ರಾಯಣ್ಣ, ಜುಂಜೇಗೌಡರಾದಿಯಾಗಿ ಎಲ್ಲರಿಗೂ ಲಿಂಗದೀಕ್ಷೆಯನ್ನು ಮಾಡಿಸುತ್ತಾರೆ. ಇಲ್ಲಿಂದ ಅಧಿಕೃತವಾಗಿ ಶ್ರೀಮಠದ ಇತಿಹಾಸ ಶುರುವಾಗುತ್ತದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ತೀರ್ಥಹಳ್ಳಿ ಸಮೀಪದ ಸಾಲೂರಿನಿಂದ ಬಂದ ಸ್ವಾಮಿಗಳಿಂದ ಸಾಲೂರು ಮಠ ಎಂಬ ಹೆಸರು ಬಂದಿತು ಎಂದು ಒಂದು ಮೂಲ ಹೇಳಿದರೆ; ಮತ್ತೊಂದು ಮೂಲ ಸಾಲು ಹಳ್ಳಿಗಳಾದ ಹಳೆಯೂರು, ಪೊನ್ನಾಚಿ, ಹೂಗ್ಯ ಮತ್ತು ಬರಗೂರುಗಳಲ್ಲಿ ಶರಣರ ಮಠಗಳನ್ನು ಮಹದೇಶ್ವರರ ಶಿಷ್ಯರಾದ ನಿರಂಜನ ಸ್ವಾಮಿಗಳು ಸ್ಥಾಪನೆ ಮಾಡಿ ಇವುಗಳಿಗೆಲ್ಲಾ ಮುಖ್ಯವಾದದ್ದು ಗಿರಿಮಠ ಆದುದರಿಂದ ಇದನ್ನು ದೊಡ್ಡಮಠ ಎಂದು ಕರೆಯಲಾಯಿತು. ಸಾಲುಹಳ್ಳಿಗಳ ಮುಖ್ಯಮಠ ಇದಾದ್ದರಿಂದ ಸಾಲೂರು ಮಠ ಎಂದೂ ಎಂದು ಹೇಳುವುದುಂಟು. ಹೆಸರು ಹೇಗಾದರೂ ಬಂದಿರಲಿ ಈ ಭಾಗದಲ್ಲಿ ಶ್ರೀಮಠದ ಮಹತ್ವ ಮಾತ್ರ ಅಪಾರವಾದದ್ದು.
ಬಹುಮುಖ್ಯವಾಗಿ ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಲೇಬೇಕು. ಮಹಾಮಹಿಮ ಮಹದೇಶ್ವರರಿಗೂ ಸಾಲೂರು ಮಠಕ್ಕೂ ಅವಿನಾಭಾವ ಸಂಬಂಧ ಇರುವುದು ಗೊತ್ತಿರುವ ವಿಚಾರ. ಈಗಲೂ ಶ್ರೀಮಠದಲ್ಲಿ ಮಹದೇಶ್ವರರು ಬಳಸಿರುವ ಪಾದುಕೆ, ಜೋಳಿಗೆ, ಬೆತ್ತ, ಬಲಮುರಿ ಶಂಖ, ಇವುಗಳು ಮಹದೇಶ್ವರರ ಪ್ರತೀಕವಾಗಿ ಇರುವುದನ್ನು ಗಮನಿಸಬಹುದು. ಮಹದೇಶ್ವರರು ತಾತ್ಕಾಲಿಕವಾಗಿ ಯೋಗ ಮಂದಿರವನ್ನಾಗಿ ಮಾಡಿಕೊಂಡಿದ್ದ ಗುಹೆ ಶ್ರೀ ಮಠದ ಎದುರೇ ಇದೆ. ಹಾಗಾದರೆ ಶ್ರೀ ಮಹದೇಶ್ವರರು ಯಾರು? ಎಲ್ಲಿಂದ ಬಂದರು? ಎಂಬುದರ ಕಡೆ ಸ್ವಲ್ಪ ಗಮನಹರಿಸಿ ಆನಂತರ ಶ್ರೀ ಮಠದ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿಯೋಣ.
ಮಹದೇಶ್ವರರು ಯಾರು? ಮತ್ತು ಎಲ್ಲಿಂದ ಬಂದರು ಎಂಬುದಕ್ಕೆ ಅಧಿಕೃತವಾಗಿ ಐತಿಹಾಸಿಕವಾದ ಆಧಾರಗಳಿಲ್ಲ. ವೀರಶೈವ ಪುರಾಣಗಳು ಮತ್ತು ಜನಪದರ ಕಾವ್ಯಗಳನ್ನು ಆಧಾರವಾಗಿಟ್ಟುಕೊಂಡು ಮಹದೇಶ್ವರರನ್ನ ಕುರಿತು ಹೇಳುವಂತಾಗಿದೆ.
ವೀರಶೈವ ಗ್ರಂಥಗಳ ಆಧಾರಲ್ಲಿ ಹೇಳುವುದಾದರೆ ೧೨ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದ ಶೂನ್ಯಪೀಠವನ್ನು ಮೊದಲು ಅಲಂಕರಿಸಿದ್ದವರೆಂದರೆ ಅಲ್ಲಮಪ್ರಭುಗಳು. ಎರಡನೇ ಪೀಠಾಧ್ಯಕ್ಷರಾಗಿ ಚೆನ್ನಬಸವಣ್ಣನವರು ಜವಾಬ್ದಾರಿ ವಹಿಸಿಕೊಂಡರು. ನಂತರ ಮೂರನೆ ಪೀಠಾಧ್ಯಕ್ಷರಾಗಿ ಸಿದ್ದರಾಮೇಶ್ವರರು ವಹಿಸಿಕೊಂಡರು. ಈ ಸಮಯಕ್ಕೆ ಕಲ್ಯಾಣದಲ್ಲಿ ಕ್ರಾಂತಿಯಾಗಿ ಬಸವಣ್ಣ ಮತ್ತಿತರ ಶರಣರ ಅಂತ್ಯವಾಗಿ; ತಾತ್ಕಾಲಿಕವಾಗಿ ಈ ಶೂನ್ಯಪೀಠದ ಪರಂಪರೆ ನಿಂತುಹೋಗಿತ್ತು. ಆನಂತರ ಶೂನ್ಯಪೀಠದ ಪರಂಪರೆಯನ್ನು ೧೪ನೆಯ ಶತಮಾನದಲ್ಲಿ ಅನಾದಿಗಣನಾಥರು ಮುಂದುವರೆಸಿದರು. ಇವರು ೪ನೆಯ ಪೀಠಾಧ್ಯಕ್ಷರಾದಂತಾಯಿತು. (ಐದನೆಯವರಾಗಿ ಆದಿಗಣೇಶ್ವರರು ವಹಿಸಿಕೊಂಡರು ಈ ಆದಿಗಣೇಶ್ವರರೇ ಕುಂತೂರು ಮಠದ ಪ್ರಭುದೇವರು. ಈ ಪ್ರಭುದೇವರು ಅನಿಮಿಷಯ್ಯ ಅವರ ಶಿಷ್ಯರು. ಅನಿಮಿಷಯ್ಯರವರು ಬಾದಾಮಿಯ ಪಟ್ಟದಕಲ್ಲಿನ ನಂದಿಕೇಶ್ವರರ ಶಿಷ್ಯರು. ಹಾಗಾಗಿ ಕುಂತೂರಿನ ಪ್ರಭುದೇವರ ಮೂಲವನ್ನು ಬಾದಾಮಿಯ ಪಟ್ಟದಕಲ್ಲು ಅಥವಾ ಆಸುಪಾಸಿನ ಊರು ಎನ್ನಬಹುದು. ಅವರು ಪ್ರಭುದೇವರನ್ನು ಶರಣ ಚಳುವಳಿಯನ್ನು ಪ್ರಸಾರ ಮಾಡಲು ದಕ್ಷಿಣಕ್ಕೆ ಕಳಿಸಿದ್ದಿರಬಹುದು. ಈ ಪ್ರಭುದೇವರ ಪ್ರಸಿದ್ಧ ಶಿಷ್ಯನೇ ನಿರ್ಮಾಯ ಗಣೇಶ್ವರರು. ಅರ್ಥಾತ್ ಶ್ರೀ ಮಹದೇಶ್ವರರು. ಇವರು ಈ ಶೂನ್ಯಪೀಠದ ಆರನೆಯ ಜಗದ್ಗುರುಗಳು. ಹೆಚ್ಚು ಕಾಲ ಶೂನ್ಯ ಪೀಠದ ಅದ್ಯಕ್ಷರಾಗಿರಲು ಒಪ್ಪದ ಮಹದೇಶ್ವರರು ತಮ್ಮ ಶಿಷ್ಯ ನಿರಂಜನ ಸ್ವಾಮಿಗಳಿಗೆ ಪೀಠ ವಹಿಸಿಕೊಟ್ಟು, ಮೂಡಲ ಮಲೆಯ ಕಡೆ ಪ್ರಯಾಣ ಬೆಳೆಸಿ ನಡುಮಲೆಯಲ್ಲಿ ನೆಲೆಸಿ ಈ ಭಾಗದ ಜನರ ಉದ್ಧಾರಕ್ಕೆ ಕಾರಣಕರ್ತರಾದರು.
ಜನಪದ ಕಾವ್ಯಗಳ ಪ್ರಕಾರ ಉತ್ತರ ದೇಶದ ಶ್ರೀಶೈಲದ ಉತ್ತಮಪುರದಲ್ಲಿ ಚಂದ್ರಶೇಖರಮೂರ್ತಿ ಹಾಗೂ ಉತ್ತರಾಜಮ್ಮನವರ ಮಗನಾಗಿ ಜನಿಸಿದ ಮಹದೇಶ್ವರರು ಮರಿದೇವರೆಂಬ ಹೆಸರಿನಿಂದ ವ್ಯಾಘ್ರಾನಂದರ ಶಿಷ್ಯರಾಗಿ ಮುಡುಕುತೊರೆಯ ಮಲ್ಲಿಕಾರ್ಜುನರ ಪ್ರಭಾವಕ್ಕೆ ಒಳಗಾಗಿ ದಕ್ಷಿಣಕ್ಕೆ ಬಂದು ಸಾಲೂರು ಮಠ, ವಾಟಾಳುಮಠ, ಕುಂತೂರು ಮಠ ಮುಂತಾದ ಕ್ಷೇತ್ರಗಳಿಗೆ ಭೇಟಿಕೊಟ್ಟು ನಡುಮಲೆಯಲ್ಲಿ ನೆಲೆಸುತ್ತಾರೆ. ಈ ಕಾಲಾವಧಿಯಲ್ಲಿ ಇನ್ನಿಲ್ಲದ ಪವಾಡಗಳಿಂದ ಹೆಸರುವಾಸಿಯಾಗುತ್ತಾರೆ. ಬೇವಿನಹಟ್ಟಿ ಕಾಳಮ್ಮ, ಸಂಕಮ್ಮ, ಜುಂಜೇಗೌಡ, ರಾಯಣ್ಣ, ಶ್ರವಣದೊರೆ ಮುಂತಾದ ಪ್ರಸಂಗಗಳು ಬರುತ್ತದೆ.
ಮಹದೇಶ್ವರರು ಎಲ್ಲಿಂದ ಬಂದರು? ಯಾರು? ಎಂಬುದಕ್ಕಿಂತ ಈ ಭಾಗದಲ್ಲಿ ಬಂದು ನೆಲೆಸಿ ಕತ್ತಲು ರಾಜ್ಯ ಎನ್ನಿಸಿಕೊಂಡಿದ್ದನ್ನು ಒಕ್ಕಲು ರಾಜ್ಯವನ್ನಾಗಿ ಮಾಡಿದರು ಎಂಬುದೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಾದೇಶ್ವರ ಮತ್ತು ಶ್ರೀ ಸಾಲೂರು ಮಠದ ಪಾತ್ರ ಮಹತ್ವವಾದುದಾಗಿದೆ.
ಹೊರ ಜಗತ್ತಿನ ಸಂಪರ್ಕವಿಲ್ಲದೆ ಈ ಭಾಗದಲ್ಲಿ ವಾಸಿಸುತ್ತಿದ್ದ ಕಾಡು ಜನರಿಗೆ ಶರಣ ದೀಕ್ಷೆಯನ್ನು ನೀಡಿ, ಅವರ ಮೌಢ್ಯ ನಂಬಿಕೆಗಳನ್ನು ಹೋಗಲಾಡಿಸಿ, ಒಂದು ಕಡೆ ನೆಲೆ ನಿಲ್ಲುವಂತೆ ಮಾಡಿ ಕೃಷಿಕಾಯಕವನ್ನು ಕಲಿಸಿ ಧರ್ಮದ ತತ್ವಗಳನ್ನು ತಿಳಿಸುವುದೇ ಸಾಲೂರು ಮಠದ ಪ್ರಮುಖ ಉದ್ದೇಶ ಆಗಿದೆ. ಸೋಲಿಗರು, ಕಾಡುಕುರುಬರು, ಇನ್ನೂ ಮುಂತಾದ ಶೋಷಿತ ಸಮುದಾಯವನ್ನು ಕೃಷಿ ಕಾಯಕಕ್ಕೆ ಹಚ್ಚಿ ಸ್ವಾವಲಂಬಿಯಾಗುವಂತೆ ಮಾಡುವುದೇ ಅಲ್ಲದೇ ಎಲ್ಲದಕ್ಕಿಂತ ಹೆಚ್ಚಾಗಿ ಈ ಭಾಗದ ಜನರಿಗೆ ಅಹಿಂಸಾ ತತ್ವ ಮತ್ತು ಪರಸ್ಪರ ಸಹಕಾರ ತತ್ವವನ್ನು ತಿಳಿಸಿಕೊಡುವುದಾಗಿತ್ತು. ಈ ಭಾಗದ ಜನರನ್ನು ಶಿಕ್ಷಿತರನ್ನಾಗಿ ಮಾಡುವುದೇ ಪ್ರಮುಖ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀಮಹದೇಶ್ವರರು ಹಾಕಿದ ಮಾರ್ಗದಲ್ಲಿ ನಡೆದ ಶ್ರೀಮಠದ ಕಾರ್ಯದಿಂದ ಕತ್ತಲೆ ರಾಜ್ಯ ಎನಿಸಿಕೊಂಡಿದ್ದ ಈ ಭಾಗ ಜಗತ್ತಿಗೆಲ್ಲಾ ಬೆಳಕು ಕೊಡುವಂತ ಪ್ರದೇಶವಾಗಿ ಹೊರ ಹೊಮ್ಮಿರುವುದನ್ನು ಕಾಣಬಹುದಾಗಿದೆ. ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಜನಪದ ಮಹಾಕಾವ್ಯವೆಂದರೆ ಮಹದೇಶ್ವರರ ಕಾವ್ಯ. ಈ ಕಾವ್ಯ ಪರಂಪರೆಯನ್ನು ಪೋಷಿಸಿ ಪ್ರೋತ್ಸಾಹಿಸಿ ಬೆಳೆಸಿದ ಕೀರ್ತಿ ಶ್ರೀ ಸಾಲೂರು ಮಠದ್ದಾಗಿದೆ. ಈವತ್ತು ದೇಶದ ನಾನಾಮೂಲೆಗಳಿಂದ ಮಹದೇಶ್ವರ ಕ್ಷೇತ್ರಕ್ಕೆ ಭಕ್ತರು ಬರುತ್ತಿದ್ದಾರೆಂದರೆ ಅದಕ್ಕೆ ಶ್ರೀಮಠದ ಗುರುಪರಂಪರೆಯೇ ಕಾರಣ.
ಕರ್ನಾಟಕದ ದಕ್ಷಿಣದ ತುದಿ ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಶ್ಚಿಮ ಘಟ್ಟಗಳಲ್ಲಿ ಆರಂಭವಾಗಿ ಪೂರ್ವ ಘಟ್ಟಗಳ ಕಡೆ ಹರಡಿಕೊಂಡಿರುವ ತಮಿಳುನಾಡು ಹಾಗೂ ಕರ್ನಾಟಕದ ಬೆಟ್ಟ ಸಾಲುಗಳಲ್ಲಿ ಹರಡಿಕೊಂಡಿದೆ. ಸಮುದ್ರಮಟ್ಟದಿಂದ ಸುಮಾರು ೩೦೦೦ ಅಡಿ ಎತ್ತರದಲ್ಲಿರುವ ಇದು ಮೈಸೂರಿನಿಂದ ೧೫೦ ಕಿಲೋಮೀಟರ್ ಹಾಗೂ ಬೆಂಗಳೂರಿನಿಂದ ೨೧೦ ಕಿಲೋ ಮೀಟರ್ ದೂರದಲ್ಲಿದೆ. ೭೭ ಬೆಟ್ಟಗಳಿಂದ ಸುತ್ತುವರೆದ ಈ ಪ್ರದೇಶದ ನಡುಮಲೆಯಲ್ಲಿ ಶ್ರೀ ಸಾಲೂರು ಮಠದ ತನ್ನ ಸ್ಥಾವರಹೊಂದಿದೆ.
ಮೊದಲು ಶ್ರೀಮಠದ ಸುತ್ತಲೂ ಕೋಟೆಯಾಕಾರದ ಗೋಡೆ ಇದ್ದು ; ಈಗ ಬಹುತೇಕ ಶಿಥಿಲವಾಗಿದೆ. ಮೂಲ ಮಠದ ಮುಂಭಾಗ ಸುಸಜ್ಜಿತ ಕಟ್ಟಡಗಳಿಂದ ಕೂಡಿದೆ. ಪೂರ್ವದ ಕಡೆ ಇರುವ ದ್ವಾರ ಬಾಗಿಲಿಗೆ ಎದುರಾಗಿ ಮಹದೇಶ್ವರರು ತಾತ್ಕಾಲಿಕವಾಗಿ ತಪಸ್ಸು ಮಾಡಿದ ಗವಿ ಇದೆ. ಮಠದ ಪೂರ್ವದಿಕ್ಕಿನಲ್ಲಿ ೧೬ ಮಂದಿ ಹಿಂದಿನ ಪೀಠಾಧಿಪತಿಗಳ ಗದ್ದುಗೆಗಳು ಇವೆ. ಇವುಗಳಿಗಿಂತ ಅನತಿ ದೂರದಲ್ಲೇ ಶೇಷಣ್ಣ ಒಡೆಯರ ಗದ್ದುಗೆ ಹಾಗೂ ಮಹದೇಶ್ವರ ದೇವಸ್ಥಾನವಿದೆ. ಶ್ರೀಮಠದ ದಕ್ಷಿಣ ಭಾಗಕ್ಕೆ ದೇವರಹಳ್ಳಿ ಗ್ರಾಮವಿದೆ. ಪ್ರಸ್ತುತ ಸಾಲೂರು ಮಠದ ಸುತ್ತಮುತ್ತ ಜನವಾಸಸ್ಥಳವಿದ್ದು ಇದೇ ಒಂದು ಗ್ರಾಮವಾಗಿ ಗೋಚರಿಸುತ್ತಿದೆ.
ಹಿಂದಿನಿಂದಲೂ ಶ್ರೀಮಠಕ್ಕೆ ಬೇಡಗಂಪಣ ರಾಜ ರಾಯಣ್ಣನ ಮನೆತನದವರು, ಆಲಂಬಾಡಿ ಜುಂಜೇಗೌಡನ ಮನೆತನದವರು ಅಲ್ಲದೆ ಮಹದೇಶ್ವರ ಬೆಟ್ಟಕ್ಕೆ ಯಾತ್ರೆಗೆ ಬರುವಾಗಲೆಲ್ಲಾ ಮೈಸೂರಿನ ಮಹಾರಾಜರೂ ಕೂಡ ಶ್ರೀಮಠಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸುತ್ತಿದ್ದರು. ಸಾಮಾನ್ಯವಾಗಿ ಮಲೆ ಮಹದೇಶ್ವರ ಸ್ವಾಮಿಯ ಒಕ್ಕಲಿನವರೆಲ್ಲ ಶ್ರೀಮಠದ ಭಕ್ತ ಪರಂಪರೆಗೆ ಸೇರಿದವರಾಗಿದ್ದರಲ್ಲದೆ ತಮಿಳುನಾಡಿನ ನೀಲಗಿರಿ, ಕೊಯಂಬತ್ತೂರು, ಸೇಲಂ ಜಿಲ್ಲೆಗಳಿಂದ ಹಾಗೂ ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲದೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೂ ಶ್ರೀಮಠಕ್ಕೆ ಭಕ್ತರು ಭೇಟಿ ನೀಡುತ್ತಾರೆ.
ಶ್ರೀ ಮಲೆಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ತ್ರಿಕಾಲ ಪೂಜೆಗಳೂ ಶ್ರೀಗಳ ಅಥವಾ ಅವರ ಪ್ರತಿನಿಧಿಗಳ ಸಮಕ್ಷಮದಲ್ಲಿ ನಡೆಯುವುದು ಅನೂಹಿತವಾಗಿ ನಡೆದು ಬಂದ ಪದ್ಧತಿಯಾಗಿದೆ. ವಿಶೇಷ ಪೂಜಾ ಸಂದರ್ಭದಲ್ಲಿ ಮಹದೇಶ್ವರ ದೇವಾಲಯದ ಸಮಿತಿಯವರು ಶ್ವೇತ ಛತ್ರಿ, ವಾದ್ಯ ಸಮೇತ ಶ್ರೀಮಠಕ್ಕೆ ಬಂದು ಶ್ರೀಗಳವರನ್ನು ವಿಜಯಂಗೈಯಿಸಿ ಕರೆದುಕೊಂಡು ಹೋಗುವುದು ವಾಡಿಕೆ. ಇವರ ಸಮ್ಮುಖದಲ್ಲಿ ಪೂಜೆ ನಡೆದು ಮಹದೇಶ್ವರ ಲಿಂಗಕ್ಕೆ ಪ್ರಸಾದ ವೈವೇದ್ಯ ಮಾಡುವ ಸಂದರ್ಭದಲ್ಲಿ ಅಲ್ಲಿಯೇ ಶ್ರೀ ಸಾಲೂರು ಶ್ರೀಗಳೂ ಕೂಡ ಪ್ರಸಾದವನ್ನು ಸ್ವೀಕರಿಸುತ್ತಾರೆ. ಆಲಯದ ಪೂಜಾ ಕಾರ್ಯಗಳಲ್ಲಿ ಶ್ರೀಮಠಕ್ಕೆ ಅಗ್ರ ತಾಂಬೂಲವೂ ಸಲ್ಲುತ್ತಾ ಬಂದಿದೆ.
ದೇವಸ್ಥಾನದ ಮಂಟಪವನ್ನು ಕಟ್ಟುವ ಕಾರ್ಯದಲ್ಲಿ ಸಾಲೂರುಮಠದ ಪಟ್ಟದ ಶ್ರೀ ಕೆಂಪನಂಜಸ್ವಾಮಿಗಳು, ಪಟ್ಟದ ಶ್ರೀ ಶಾಂತಲಿಂಗಸ್ವಾಮಿಗಳು, ಮತ್ತು ಪಟ್ಟದ ಶ್ರೀ ಮುದ್ದುವೀರಸ್ವಾಮಿಗಳು ಬಹಳವಾಗಿ ಶ್ರಮಿಸಿರುತ್ತಾರೆ. ದೇವಸ್ಥಾನದ ಯಜಮಾನ್ಯವು ಸುಮಾರು ಆರು ಶತಮಾನಗಳಿಂದ ಸಾಲೂರು ಮಠದ ಸ್ವಾಮಿಗಳ ಒಡೆತನದಲ್ಲಿ ಇತ್ತು. ದೇವಸ್ಥಾನ ಹಂತಹಂತವಾಗಿ ಅಭಿವೃದ್ಧಿ ಹೊಂದಬೇಕಾದರೆ ಹಿಂದಿನ ಶ್ರೀಗಳವರ ಪಾತ್ರ ಅನನ್ಯವಾದದ್ದು. ಹೈದರಾಲಿ ಮತ್ತು ಈಸ್ಟ್ ಇಂಡಿಯಾ ಕಂಪನಿಯವರು ಕೊಟ್ಟಿರುವ ತಾಮ್ರ ಶಾಸನಗಳು ಇದಕ್ಕೆ ನಿದರ್ಶನವಾಗಿದೆ.
ಈಸ್ಟ್ ಇಂಡಿಯಾ ಕಂಪನಿ ಆಡಳಿತಕ್ಕೆ ಒಳಪಟ್ಟ ನಂತರ ೧೯೨೬ರಲ್ಲಿ ದೇವಸ್ಥಾನ ಮದರಾಸು ಎಂಡಡೋಮೆಂಟ್ ಆಕ್ಟಿಗೆ ಒಳಪಟ್ಟಿತು. ೧೯೫೧ ರಿಂದ ಮದರಾಸು ಸರ್ಕಾರದಿಂದ ಮುಜರಾಯಿ ಇಲಾಖೆಗೆ ಒಳಪಟ್ಟಿತು. ೧೯೫೬ರ ಭಾಷಾವಾರು ಪ್ರಾಂತ್ಯ ವಿಗಂಡಣೆಯಾದ ಮೇಲೆ ೦೧-೧೧-೧೯೫೬ ರಿಂದ ದೇವಸ್ಥಾನವು ವಿಶಾಲ ಮೈಸೂರು ಕರ್ನಾಟಕಕ್ಕೆ ಸೇರಿತು.
ಪ್ರಾರಂಭದಿಂದಲೂ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತಂಗುವ ಸೌಕರ್ಯಕ್ಕಾಗಿ ಶ್ರೀಮಠವು ಧರ್ಮಶಾಲೆಯ ಜೊತೆಗೆ ಅನ್ನ ಪಾನಾದಿಗಳಿಗೆ ದಾಸೋಹ ವ್ಯವಸ್ಥೆಯನ್ನೂ ಕೂಡ ಮಾಡಿಕೊಂಡು ಬಂದಿದೆ. ಇತ್ತೀಚೆಗೆ ದೇವಸ್ಥಾನದ ವತಿಯಿಂದ ದಾಸೋಹ ನಡೆಯುತ್ತಿದ್ದರೂ ಕೂಡ ಶ್ರೀಮಠದ ಪ್ರಸಾದ ಭಕ್ತರಿಗೆ ಯಾವತ್ತೂ ಕೂಡ ವಿಶೇಷ ಮತ್ತು ಭಕ್ತಿಪೂರ್ವಕವಾದುದಾಗಿದೆ.
ಶ್ರೀ ಸಾಲೂರು ಮಠಕ್ಕೂ ಶ್ರೀ ಶ್ರೀ ಮಲೆಮಹದೇಶ್ವರಸ್ವಾಮಿ ದೇವಸ್ಥಾನಕ್ಕೂ ಗುರುಲಿಂಗಜಂಗಮ ಸಂಬಂಧವಿದೆ. ಗುರುವಿಲ್ಲದೆ ಲಿಂಗವಿಲ್ಲ. ಶ್ರೀ ಮಹದೇಶ್ವರ ಪೂಜಾ ವಿಧಾನವು ವಿಶೇಷವಾದದ್ದು. ಶ್ರೀ ಮಹದೇಶ್ವರರು ಶೂನ್ಯ ಪೀಠದ ೬ನೆಯ ಜಗದ್ಗುರು ಎಂದು ತಿಳಿದು ಬರುತ್ತದೆ. ವೀರಶೈವ ಶಿವಶರಣರಾದ ಪ್ರಯುಕ್ತ ಇವರಿಗೆ ಸಲ್ಲುವ ಪೂಜಾ ವಿಧಾನವು ಇಂದಿಗೂ ಶರಣರ ತತ್ವವನ್ನೆ ಅವಲಂಭಿಸಿದೆ. ಗುರುವೇ ಲಿಂಗ, ಲಿಂಗವೇ ಜಂಗಮ ಎಂಬ ಶರಣ ತತ್ವವೇ ಶ್ರೀ ಮಹದೇಶ್ವರ ದೇವಸ್ಥಾನದ ಪೂಜಾ ವಿಧಾನ. ಇಂದೂ ಕೂಡ ಶ್ರೀ ಸಾಲೂರು ಮಠದ ಶ್ರೀಗಳ ಸಮ್ಮುಖದಲ್ಲಿಯೇ ಪೂಜೆಗಳು ನಡೆಯುತ್ತಿವೆ. ಮಹದೇಶ್ವರಸ್ವಾಮಿಯ ತ್ರಿಕಾಲ ಪೂಜೆಯ ನಂತರ ಲಿಂಗಕ್ಕೆ ಪ್ರಸಾದ (ಎಡೆ) ನೈವೇದ್ಯ ಮಾಡುವ ಸಮಯದಲ್ಲಿಯೇ ಸಾಲೂರು ಮಠದ ಪೀಠಾಧಿಪತಿಗಳು ಮಹದೇಶ್ವರಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿ ಲಿಂಗದ ಮುಂದೆ ಕುಳಿತು ಪ್ರಸಾದವನ್ನು ನೈವೇದ್ಯ ಸಮಯದಲ್ಲೇ ಸ್ವೀಕರಿಸಬೇಕು ಇದು ಜಂಗಮ ತೃಪ್ತಿ. ಲಿಂಗ ತೃಪ್ತಿಯ ಪ್ರತೀಕ.
ಶ್ರೀ ಸಾಲೂರು ಮಠದ ಶ್ರೀಗಳು ಪ್ರತಿದಿನ ನಿತ್ಯೋತ್ಸವ, ಮಾಸೋತ್ಸವ ಮುಂತಾದ ಎಲ್ಲಾ ಧಾರ್ಮಿಕ ವಿಧಿ-ವಿಧಾನ ಪೂಜಾದಿಗಳಲ್ಲಿಯೂ ಇರಬೇಕೆಂಬ ಸಂಪ್ರದಾಯಿಕ ಅನುಚನವಾದ ಸಂಬಂಧದ ಬೆಸುಗೆಯಿದೆ. ಮಹಾಲಯ ಅಮಾವಾಸ್ಯೆಯಿಂದ ಯುಗಾದಿವರೆಗೆ ಆರು ಜಾತ್ರಾ ವಿಶೇಷಗಳು ಕ್ಷೇತ್ರದಲ್ಲಿ ನಡೆಯುವುದು ವಿಶೇಷ. ಎಲ್ಲಾ ಪೂಜಾಉತ್ಸವಗಳಿಗೆ ಶ್ರೀ ಸಾಲೂರುಮಠದ ಪೀಠಾಧಿಪತಿಗಳನ್ನು ಕರೆದೊಯ್ಯಲು ದೇವಸ್ಥಾನದಿಂದ ಛತ್ರಿ, ಚಾಮರ ಮುಂತಾದ ಬಿರುದುಗಳೊಡನೆ ವಾದ್ಯ ಸಮೇತವಾಗಿ ಬಂದು ಸಕಲ ಧಾರ್ಮಿಕ ಗೌರವಗಳೊಂದಿಗೆ ಕರೆದೊಯ್ಯುತ್ತಾರೆ.
ಕ್ರ.ಸಂ | ಮಾಸ | ಜಾತ್ರೆಗಳು | ವಿಶೇಷ ಪೂಜಾ ಉತ್ಸವಗಳು |
1 | ಅಶ್ವಯುಜ | ಮಹಾಲಯ ಅಮಾವಾಸ್ಯೆ | ವಿಶೇಷ ಪೂಜೆ |
2 | ಅಶ್ವಯುಜ | ನವರಾತ್ರಿ ವಿಶೇಷ ಮತ್ತು ಆಯುಧಪೂಜೆ, ವಿಜಯದಶಮಿ ಉತ್ಸವಗಳು | ೯ ದಿನಗಳು ಉಯ್ಯಾಲೋತ್ಸವ ತೆಪ್ಪೋತ್ಸವ |
3 | ಕಾರ್ತಿಕ | ದೀಪಾವಳಿ | ಹಾಲರವಿ ಉತ್ಸವ, ರರಥೋತ್ಸವ, ತೆಪ್ಪೋತ್ಸವ |
4 | ಕಾರ್ತಿಕ | ಕಡೇ ಕಾರ್ತಿಕ ಸೋಮವಾರ ಮತ್ತು ಕಾರ್ತಿಕ ಅಮಾವಾಸ್ಯೆಯಂದು ತೆಪ್ಪೋತ್ಸವ | ದೀಪೋತ್ಸವ, ತೆಪ್ಪೋತ್ಸವ |
5 | ಮಾಘ | ಮಹಾಶಿವರಾತ್ರಿ | ರಥೋತ್ಸವ, ಕೊಂಡೋತ್ಸವ |
6 | ಚೈತ್ರ | ಯುಗಾದಿ | ರಥೋತ್ಸವ |
ಇದೇ ರೀತಿಯಲ್ಲಿ ಶ್ರೀ ಮಹದೇಶ್ವರರಿಗೆ ವಿಶೇಷ ಪೂಜೆಗಳನ್ನು ಶ್ರೀ ಮಠದವರೂ ಮಾಡಬೇಕಾಗಿರುತ್ತದೆ.
- ಗೌರಿ ಹಬ್ಬದ ಪೂಜೆಯ ದಿನ ಹಾಗೂ ಗೌರಮ್ಮನನ್ನು ಬಿಡುವ ದಿನ
- ಆಯುಧ ಪೂಜೆಯ ದಿನ
- ಕೊನೆಯ ಕಾರ್ತಿಕ ಸೋಮವಾರ ಮತ್ತು ಕಾರ್ತಿಕದಲ್ಲಿ ೭ದಿನ ಮತ್ತು ಮಾರ್ಗಶಿರಮಾಸದ ಷಷ್ಠಿದಿನ
- ಮಾರ್ಗಶಿರ ಮಾಸದ ಏಳುದಿನಗಳು.
ಮಹಾಶಿವರಾತ್ರಿಯ ಆದ ನಂತರದ ಮೊದಲ ಗುರುವಾರದಂದು ಶ್ರೀಮಠದ ವತಿಯಿಂದ ಮಹಾರುದ್ರಾಭಿಷೇಕ ವಿಶೇಷ ಪೂಜಾ ಉತ್ಸವಗಳು ನಡೆಯುತ್ತದೆ.
ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಪೂಜೆಯೂ ಕೂಡ ಒಂದು ವಿಶೇಷ. ಈ ಸೇವೆಯು ಪ್ರತೀ ಗುರುವಾರ ಮಾತ್ರ ನಡೆಯುತ್ತದೆ. ನೂರೆಂಟು ಬಾರಿ ಅಭಿಷೇಕ, ಉತ್ರಾಣಿ ಕಟ್ಟಿ ಆರತಿ,ಧೂಪಸೇವೆ, ನೈವೇದ್ಯ ಮಾಡಲಾಗುತ್ತದೆ. ಈ ಸೇವೆ ಮಾಡಬೇಕಾದರೆ ಕೂಡ ಹಿಂದಿನ ದಿನವೇ ಶ್ರೀಮಠಕ್ಕೆ ಬಂದು ಬಿನ್ನಹ ಸಲ್ಲಿಸಬೇಕು.
ಇದೇ ರೀತಿಯಲ್ಲಿ ಶ್ರೀ ಸಾಲೂರುಮಠಕ್ಕೂ ಶ್ರೀ ಮಹದೇಶ್ವರ ದೇವಸ್ಥಾನಕ್ಕೂ ಅನೂಚಾನವಾಗಿ ಸಂಬಂಧ ಬೆಳೆದು ಬಂದಿದೆ. ಶ್ರೀ ಸಾಲೂರು ಮಠದ ಶ್ರೀಗಳು ಇದಲ್ಲದೇ ಈ ಕ್ಷೇತ್ರದ ಸುತ್ತಲೂ ಇರುವ ಉಪದೇವಾಲಯಗಳ ಪೂಜೆಗಳಲ್ಲಿ ಭಾಗವಹಿಸಬೇಕು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ತಪಸರೆ, ನಾಗಮಲೆ, ಎದುರುಬೋಳಿ, ಇಂಡಿಬಸಪ್ಪ, ಪಾದದರೆ, ಕಾರಯ್ಯನಬೋಳಿ, ಬಳಪದ ಕಲ್ಲಿನ ಬಸಪ್ಪ, ಗೌಜಲಕ್ಕಿ ಬಸವೇಶ್ವರ, ಕಣಿವೆ ಬಸವೇಶ್ವರ, ಆದಿಮಾದಪ್ಪನ ಗದ್ದುಗೆ ಮುಂತಾದವುಗಳು. ಈ ತರಹವಾದ ಧಾರ್ಮಿಕ ಕೈಂಕರ್ಯಗಳಲ್ಲಿ ನಿರಂತರವಾಗಿ ಮಠ ಮತ್ತು ಮಠದ ಪೀಠಾಧಿಪತಿಗಳ ಕಾರ್ಯ ನಿರಂತರವಾಗಿದೆ.
ಈ ಹಿನ್ನೆಲೆಯಲ್ಲಿ ಸಾಲೂರು ಮಠವು ಹಲವಾರು ಯೋಗ್ಯ ಗುರುಗಳ ಪರಂಪರೆ ಹೊಂದಿದ್ದು, ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.
೧. ಶ್ರೀ ಸಾಲೂರು ಸ್ವಾಮಿಗಳು
೨. ಶ್ರೀ ಶಾಂತಲಿಂಗ ಸ್ವಾಮಿಗಳು
೩. ಇಮ್ಮಡಿ ಸಾಲೂರು ಸ್ವಾಮಿಗಳು(ಪ್ರಬಾರ)
೪. ಶ್ರೀ ಕರಿಬಸವ ದೇವರು (ಶ್ರೀ ಕರಿ ಬಸವ ಸ್ವಾಮಿಗಳು)
೫. ಶ್ರೀ ಮುದ್ದುವೀರಸ್ವಾಮಿಗಳು
೬. ಶ್ರೀ ಶಾಂತದೇವರು
೭. ಶ್ರೀ ನಂಜೇದೇವರು
೮. ಶ್ರೀ ಕೆಂಪನಂಜಸ್ವಾಮಿಗಳು
೯. ಶ್ರೀ ಸಿದ್ದವೀರಸ್ವಾಮಿಗಳು
೧೦. ಶ್ರೀ ಗುಂಡೇಗಾಲದ ಸ್ವಾಮಿಗಳು
೧೧. ಶ್ರೀ ಚನ್ನೂರಿನ ಸ್ವಾಮಿಗಳು
೧೨. ಶ್ರೀ ದೇವರಹಳ್ಳಸ್ವಾಮಿಗಳು
೧೩. ಶ್ರೀ ಸಿದ್ದವೀರಸ್ವಾಮಿಗಳು
೧೪. ಶ್ರೀ ಬೆಳತೂರು ಕೆಂಪನಂಜಸ್ವಾಮಿಗಳು
೧೫. ಇಮ್ಮಡಿ ಶಾಂತ ಲಿಂಗಸ್ವಾಮಿಗಳು
೧೬. ಇಮ್ಮಡಿ ಮುದ್ದುವೀರಸ್ವಾಮಿಗಳು
೧೭. ಶ್ರೀ ಮಹಾದೇವಸ್ವಾಮಿಗಳು
೧೮. ಶ್ರೀ ಪಟ್ಟದ ಗುರುಸ್ವಾಮಿಗಳು
೧೯. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು
ಬೇಡರ ಕುಲದವರಾದ ಕನ್ನಪ್ಪನ ವಂಶಸ್ಥರು ಬೇಡಗಂಪಣರು. ಕಾಡು ಸೋಲಿಗರೊಂದಿಗೆ ಅಲ್ಲಲ್ಲಿ ಪೋಡುಗಳನ್ನು ನಿರ್ಮಿಸಿಕೊಂಡು ಬೇಟೆಗಳಲ್ಲಿ ತೊಡಗಿ ಅಲೆಮಾರಿಗಳಾಗಿದ್ದವರು. ಈ ಪ್ರದೇಶಕ್ಕೆ ಮಹದೇಶ್ವರರು ಕಾಲಿಟ್ಟು ಇವರ ಮೇಲೆ ಅಪಾರವಾದ ಪ್ರಭಾವವನ್ನು ಬೀರಿ ಒಂದು ಕಡೆ ನೆಲೆ ನಿಲ್ಲುವಂತೆ ಮಾಡಿದುದಲ್ಲದೆ ಕೃಷಿಕ ವೃತ್ತಿಯನ್ನು ಮಾಡುವಂತೆ ಪ್ರೇರೇಪಿಸಿದರು. ಅಲ್ಲದೆ ಮಾಂಸಾಹಾರಿಗಳಾಗಿದ್ದ ಇವರನ್ನು ಲಿಂಗಧಾರಣೆಯ ದೀಕ್ಷೆ ನೀಡಿ ಲಿಂಗಾಯಿತ ಪರಂಪರೆಗೆ ಸೇರಿಸಿದುದಲ್ಲದೆ ಮುಂದೆ ಇದೇ ಬೇಡಗಂಪಣ ಜನರು ದೇವಸ್ಥಾನದ ತಮ್ಮಡಿಗಳಾಗಿ ಪೂಜಾ ಕೈಂಕರ್ಯಗಳನ್ನು ನಡೆಸುವಂತಾದರು. ಬಹಳ ವರ್ಷ ಈ ತಮ್ಮಡಿಗಳೇ ಸಂಪೂರ್ಣವಾಗಿ ದೇವಸ್ಥಾನದ ಉಸ್ತುವಾರಿ ಹೊತ್ತಿದ್ದರಲ್ಲದೆ ಸದಾ ಸಾಲೂರು ಮಠದ ಶ್ರೀಗಳಿಂದ ಸಲಹೆ, ಮಾರ್ಗದರ್ಶನ ಪಡೆದು ಅವರ ನೇತೃತ್ವದಲ್ಲಿ ಕೆಲಸ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ಸಾಲೂರು ಮಠದ ಶ್ರೀಗಳೇ ಇವರ ಕುಲಗುರುಗಳಾಗಿದ್ದು, ಈ ಜನಾಂಗಕ್ಕೆ ಇರುವ ಏಕೈಕ ಮಠವಾಗಿದೆ. ಈವತ್ತಿಗೂ ಮಾಂಸಾಹಾರ ಸೇವನೆ ಮಾಡದ ಏಕೈಕ ಬುಡಕಟ್ಟು ಜನಾಂಗವಿದ್ದರೆ ಅದು ಈ ಬೇಡಗಂಪಣ ಜನಾಂಗ ಮಾತ್ರ.
ಇಂದಿಗೂ ಈ ಜನಾಂಗದ ಆಚಾರ ವಿಚಾರಗಳಲ್ಲಿ ಸಾಲೂರು ಶ್ರೀಗಳು ಒಂದು ಭಾಗವಾಗಿಯೇ ಇರುತ್ತಾರೆ. ಜನನದ ಸಂಸ್ಕಾರಗಳು, ಲಿಂಗಧಾರಣೆ, ಶವಸಂಸ್ಕಾರ, ಮದುವೆ ಮುಂತಾದ ಕಾರ್ಯಗಳು ಶ್ರೀಮಠದ ದೀಕ್ಷಾ ಮರಿಗಳಿಂದಲೇ ನೆರವೇರುತ್ತದೆ. ಈ ಗುಡ್ಡಗಾಡು ಜನರನ್ನು ಪರಿವರ್ತಿಸಿ ನಾಗರೀಕ ಪ್ರಪಂಚಕ್ಕೆ ಅಣಿ ಮಾಡಿದ ಕೀರ್ತಿ ಮಹದೇಶ್ವರ ಮತ್ತು ಸಾಲೂರು ಮಠದ ಶ್ರೀಗಳಿಗೆ ಸಲ್ಲುತ್ತದೆ.
ದೇವರ ಗುಡ್ಡರ ಪರಿಕಲ್ಪನೆ ಬಹಳ ವಿಶಿಷ್ಟವಾದುದು. ದೇವರಗುಡ್ಡರ ದೀಕ್ಷೆ ಎಂದರೆ ಲಿಂಗಧಾರಣೆಯಲ್ಲ. ರುದ್ರಾಕ್ಷಿಧಾರಣೆ ಜತೆಗೆ ಮಹದೇಶ್ವರರ ಕಾಯಕ ಮತ್ತು ಆಚಾರದ ಶಿವದೀಕ್ಷೆಯಾಗುತ್ತದೆ. ಅಂದರೆ ಇವರು ಒಂದು ರೀತಿಯಲ್ಲಿ ಮಹದೇಶ್ವರರ ವಿಚಾರಗಳನ್ನು, ತತ್ವಗಳನ್ನು ಎಲ್ಲಾ ಊರುಗಳಲ್ಲಿ ತಿರುಗಿ ಪ್ರಚಾರಮಾಡುವುದು. ಬಗಲಲ್ಲಿ ಬೆತ್ತ, ಹೆಗಲಿಗೆ ಜೋಳಿಗೆ ಹಾಗೂ ಕೈಯಲ್ಲಿ ಕಂಸಾಳೆಯನ್ನು ಹಿಡಿದು ಊರೂರು ಬಿಕ್ಷಾಟನೆಗೆ ತಿರುಗಿ ಪ್ರಚಾರ ಮಡುವುದು. ಬಗಲಲ್ಲಿ ಬೆತ್ತ, ಹೆಗಲಿಗೆ ಜೊಳಿಗೆ ಹಾಗೂ ಕೈಯಲ್ಲಿ ಕಂಸಾಳೆಯನ್ನು ಹಿಡಿದು ಊರೂರು ಬಿಕ್ಷಾಟನೆಗೆ ತಿರುಗಿ ಮಹದೇಶ್ವರ ಕಾವ್ಯವನ್ನು ಹಾಡುತ್ತಾ ಪ್ರಚಾರ ಮಾಡುವುದು. ಸೋಮವಾರ ಮತ್ತು ಶುಕ್ರವಾರ ಸಾಮಾನ್ಯವಾಗಿ ಗುಡ್ಡನನ್ನು ಬಿಡುತ್ತಾರೆ. ಮಹದೇಶ್ವರ ಒಕ್ಕಲಿನ ಯಾವುದೇ ಜನಾಂಗದವರಾದರೂ ಕೂಡ ಗುಡ್ಡ ಬಿಡಬಹುದು. ಈ ದೀಕ್ಷೆ ಪಡೆದವರು ಸಾಮಾನ್ಯವಾಗಿ ದುಶ್ಚಟಗಳಿಂದ ದೂರವಾಗಿದ್ದುಕೊಂಡು ಸನ್ಮಾರ್ಗಿಗಳಾಗಿ ಬಾಳುವರು. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಗುಡ್ಡರನ್ನಾಗಿ ಮಾಡುತ್ತಾರೆ. ಒಂದು ದಿನದ ಸಂಪಾದನೆಯನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ಸಲ್ಲಿಸುವುದು ಇವರ ವಾಡಿಕೆಯಾಗಿದೆ. ಪ್ರಸ್ತುತ ಮಹದೇಶ್ವರ ಕಾವ್ಯ ಜಗತ್ತಿನ ಪ್ರಮುಖ ಮಹಾಕಾವ್ಯಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿರುವುದಕ್ಕೆ ದೇವರ ಗುಡ್ಡರ ಕಾಣಿಕೆ ಅಮೋಘವಾದುದಾಗಿದೆ.
ಈ ಮೊದಲೇ ಹೇಳಿದಂತೆ ಈ ಪ್ರದೇಶ ಕಾಡುಜನರಿಂದ ಕೂಡಿದ್ದು, ಹೊರಜಗತ್ತಿನ ಸಂಪರ್ಕವಿಲ್ಲದೆ ಆಧುನಿಕ ಶಿಕ್ಷಣಗಳಿಂದ ವಂಚಿತವಾಗಿತ್ತು. ಮಹದೇಶ್ವರರು ಈ ಕ್ಷೇತ್ರಕ್ಕೆ ಬಂದ ಮೇಲೆ ಬಹಳಷ್ಟು ಮಂದಿ ದೀಕ್ಷಾವಂತರಾಗಿ ಧಾರ್ಮಿಕ ಶಿಕ್ಷಣವನ್ನು ಪಡೆದರು. ಪ್ರಾರಂಭದಲ್ಲಿ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗೆ ಈ ಪ್ರದೇಶ ಸೇರಿದ್ದರಿಂದ ತಮಿಳಿನವರ ಮಲತಾಯಿ ಧೋರಣೆಯಿಂದ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಸ್ಥಾಪಿತವಾಗಲಿಲ್ಲ. ಇದನ್ನು ಮನಗಂಡ ಶ್ರೀಸಾಲೂರು ಮಠದ ಮುದ್ದುವೀರಸ್ವಾಮಿಗಳು ಒಂದು ವಿದ್ಯಾಸಂಸ್ಥೆಯನ್ನು ತೆರೆದರು. ಅವರ ಕಾಲಾನಂತರ ಪಟ್ಟಾಧಿಕಾರಿಗಳಾಗಿ ಬಂದ ಶ್ರೀ ಮಹಾದೇವಸ್ವಾಮಿಗಳು ಶಿಕ್ಷಣದ ಮಹತ್ವವನ್ನು ತಿಳಿದು ಹಲವಾರು ಶಾಲೆಗಳನ್ನು ತೆರೆದುದಲ್ಲದೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಮಠದಲ್ಲೇ ಇರಲು ವ್ಯವಸ್ಥೆ ಮಾಡಿ ಊಟ, ವಸತಿಗಳನ್ನು ನೀಡಿ ಶಿಕ್ಷಣ ಒದಗಿಸಿದರು. ಬಹುತೇಕ ಕೊಳ್ಳೇಗಾಲ ತಾಲ್ಲೂಕಿನ ಎಲ್ಲಾ ಊರುಗಳ ವಿದ್ಯಾರ್ಥಿಗಳು ಇದರಿಂದಾಗಿ ಶಿಕ್ಷಣವನ್ನು ಪಡೆಯುವತಾಯಿತು. ಪ್ರಸ್ತುತ ಅತೀ ಹೆಚ್ಚು ವಿದ್ಯಾವಂತರನ್ನು ಈ ಭಾಗದಲ್ಲಿ ಕಾಣಬಹುದು. ಇದಕ್ಕೆ ಕಾರಣ ಶ್ರೀಮಠ.
ಶ್ರೀ ಮಲೈ ಮಹಾದೇಶ್ವರ ಕೃಪಾ ವಿದ್ಯಾಸಂಸ್ಥೆಯಡಿಯಲ್ಲಿ ಶ್ರೀಕ್ಷೇತ್ರದಿಂದ ತಾಲ್ಲೂಕು ಕೇಂದ್ರವಾದ ಕೊಳ್ಳೇಗಾಲದ ವರೆಗೆ ಮತ್ತು ಇತರೆ ಜಿಲ್ಲೆಗಳಲ್ಲೂ ಕೂಡ ಅನೇಕ ಶಾಲಾ ಕಾಲೇಜುಗಳು, ವೇದಾಗಮ ಸಂಸ್ಕೃತ ಪಾಠಶಾಲೆಗಳು ಹಾಗೂ ಐ.ಟಿ. ತರಬೇತಿ ಕೇಂದ್ರಗಳು ಇದ್ದು ಶ್ರೀಮಠದ ಶೈಕ್ಷಣಿಕ ಕೊಡುಗೆ ಅಪಾರವಾಗಿದೆ.
ಪ್ರಸ್ತುತ ಶ್ರೀಮಠದ ವಿದ್ಯಾಸಂಸ್ಥೆ ವತಿಯಿಂದ ಈ ಕೆಳಕಂಡ ಶಾಲಾ ಕಾಲೇಜುಗಳು ನಡೆಯುತ್ತಿವೆ.
ಶ್ರೀ ಮಲೆ ಮಹದೇಶ್ವರಸ್ವಾಮಿ ಕೃಪಾ ಏಜುಕೇಷನ್ ಸೊಸೈಟಿ (ರಿ)
ಸಂಸ್ಥೆಯ ವತಿಯಿಂದ ನಡೆಸುತ್ತಿರುವ ಶಾಲಾ ಕಾಲೇಜುಗಳ ವಿವರ
ಕ್ರ.ಸಂ | ಶಾಲಾ ಕಾಲೇಜುಗಳ ಹೆಸರು | ಸ್ಥಳ |
01
02 03 04 05 06 07 08 09 10 11 12 13 14 15 16 17 18 19 20 21 |
ಶ್ರೀ ಮಹದೇಶ್ವರ ಪ್ರೌಢಶಾಲೆ
ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಕಾನ್ವೆಂಟ್ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಹಿ.ಪ್ರಾ.ಶಾಲೆ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಸಂಸ್ಕೃತ ಪಾಠಶಾಲೆ ಶ್ರೀ ಮಹದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಶ್ರೀ ಮಹದೇಶ್ವರ ವೇದ-ಆಗಮ ಪಾಠಶಾಲೆ ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ ಶ್ರೀ ಮಹದೇಶ್ವರ ಪ್ರೌಢಶಾಲೆ ಶ್ರೀ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ ಶ್ರೀ ಮಹದೇಶ್ವರ ಐ.ಟಿ.ಐ ಶ್ರೀ ಮಹದೇಶ್ವರ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಮಹದೇಶ್ವರ ಪದವಿ ಪೂರ್ವ ಕಾಲೇಜು ಶ್ರೀ ಮಹದೇಶ್ವರ ಐ.ಟಿ.ಐ ಶ್ರೀ ಮಹದೇಶ್ವರ ಸಂಸ್ಕೃತ ಕಾಲೇಜು ಶ್ರೀ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಮಹದೇಶ್ವರ ಪ್ರೌಢಶಾಲೆ ಶ್ರೀ ಸಾಲೂರು ಸ್ವಾಮಿ ಪ್ರೌಢಶಾಲೆ ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ |
ಮಹದೇಶ್ವರ ಬೆಟ್ಟ
ಮಹದೇಶ್ವರ ಬೆಟ್ಟ ಮಹದೇಶ್ವರ ಬೆಟ್ಟ ಮಹದೇಶ್ವರ ಬೆಟ್ಟ ಮಹದೇಶ್ವರ ಬೆಟ್ಟ ಮಹದೇಶ್ವರ ಬೆಟ್ಟ ಹಳೆಯೂರು ಒಡೆಯರಪಾಳ್ಯ ಒಡೆಯರಪಾಳ್ಯ ಒಡೆಯರಪಾಳ್ಯ ಪಿ.ಜಿ.ಪಾಳ್ಯ ಹೊಸಪಾಳ್ಯ ಹನೂರು ಕಣ್ಣೂರು ಕೊಳ್ಳೇಗಾಲ ಕೊಳ್ಳೇಗಾಲ ಕೊಳ್ಳೇಗಾಲ ಕೊಳ್ಳೇಗಾಲ ಕೆಂಪನಪಾಳ್ಯ ಪೊನ್ನಾಚಿ ದೇವರಹಳ್ಳಿ |
ಶ್ರೀಮಠದ ಜಮೀನಿನಲ್ಲಿ ರಾಗಿ, ಜೋಳ, ಅವರೆ, ಸಾಸಿವೆ, ಹುಚ್ಚೆಳ್ಳು, ಸಾಮೆ, ನವಣೆ, ಹಾರಕ, ಮುಂತಾದ ಧಾನ್ಯಗಳನ್ನು ಬೆಳೆಯುವುದರ ಜೊತೆಗೆ ವಾಣಿಜ್ಯ ಬೆಳೆಗಳಾದ ಅರಿಸಿನ ಸೂರ್ಯಕಾಂತಿಗಳನ್ನು ಸಹ ಬೆಳೆಯಲಾಗುತ್ತದೆ. ಕ್ರಮೇಣ ಸಿರಿಧಾನ್ಯಗಳಾದ ಸಾಮೆ, ನವಣೆ, ಹಾರಕ ಮುಂತಾದ ಧಾನ್ಯಗಳನ್ನು ಬೆಳೆಯುವುದು ಕಡಿಮೆಯಾಗಿ ಕೇವಲ ರಾಗಿ ಮತ್ತು ಇತರೆ ಧಾನ್ಯಗಳನ್ನು ಬೆಳೆಯುವಂತಾಯಿತು. ಆದರೂ ಪ್ರಸ್ತುತ ಇರುವ ಶ್ರೀಶಾಂತಮಲ್ಲಿಕಾರ್ಜುನಸ್ವಾಮಿಗಳ ಒಲವಿನಿಂದ ಹಿಂದಿನ ಆಹಾರಪದ್ಧತಿ, ಇಂದಿನ ಜನಾಂಗಕ್ಕೆ ಅಗತ್ಯವೆಂಬುದನ್ನು ಮನಗಂಡು ಮತ್ತೆ ಮಠದ ಜಮೀನಿನಲ್ಲಿ ಸಿರಿಧಾನ್ಯವನ್ನು ಬೆಳೆಯುವ ಪರ್ವಕ್ಕೆ ನಾಂದಿ ಹಾಡಿರುವುದು ವಿಶೇಷವಾಗಿದೆ.
೧ ಆನೆಮಲೆ ೪೦ ಆಲಂಬಾಡಿ ಮಲೆ
೨ ಜೇನುಮಲೆ ೪೧ ಮಜ್ಜನಕಾನ್ಪೋಳಿಮಲೆ
೩ ಗುಂಜಿಮಲೆ ೪೨ ಕಾಜಮುನಿಯಪ್ಪ ಮಲೆ
೪ ಗುರುಗಂಜಿ ಮಲೆ ೪೩ ಗಣಜಕ್ಕಿಬಸವೇಶ್ವರ ಮಲೆ
೫ ಕಾನುಮಲೆ ೪೪ ಒಳಕಲ್ಬಸಪ್ಪಮಲೆ
೬ ಕಂಬತ್ತಿ ಮಲೆ ೪೫ ಊರಕ್ಕಿಬಸಪ್ಪಮಲೆ
೭ ಶಮದಾಕ್ಷಿ ಮಲೆ ೪೬ ಗುಂಜಿಬಸವೇಶ್ವರಮಲೆ
೮ ಪದುಮಮಲೆ ೪೭ ಉಪ್ಪಿಬಸವೇಶ್ವರಮಲೆ
೯ ಪಚ್ಚೆಮಲೆ ೪೮ ಆನುಮಲೆ
೧೦ ಪೂಜೆಮಲೆ ೪೯ ದಾವಳಮಲೆ
೧೧ ಪೊನ್ನಾಚಿಮಲೆ ೫೦ ಗಂಧಹಳ್ಳಿ ರಂಗಪ್ಪ ಮಲೆ
೧೨ ಕೊಂಗುಮಲೆ ೫೧ ದೇವಾಲಯಬೋಳಿಮಲೆ
೧೩ ಕೋನಾಚಿಮಲೆ ೫೨ ಕಡೆಬೋಳಿ ವೀರೇಶ್ವರಮಲೆ
೧೪ ಸಂಕುಮಲೆ ೫೩ ನೂರೊಂದು ಸ್ವಾಮಿಮಲೆ
೧೫ ರುದ್ರಾಕ್ಷಿಮಲೆ ೫೪ ದಬ್ಬಗೂಳಿಬಸವೇಶ್ವರಮಲೆ
೧೬ ಭದಾಕ್ತಿಮಲೆ ೫೫ ಪಡುಗಲ್ಲಮಾದೇಶ್ವರ ಮಲೆ
೧೭ ಮಂಜುಮಲೆ ೫೬ ಕತ್ತಿಗಿಡದ ಮಲೆ
೧೮ ಈಬುತ್ತಿಮಲೆ ೫೭ ಬೂದಮಲೆ
೧೯ ಬಾಸುಮಂಗಮಲೆ ೫೮ ಎತ್ತವನಮಲೆ
೨೦ ಗಾಳಿಮಲೆ ೫೯ ಎರಕೈಮಲೆ
೨೧ ಗೌಳಿಮಲೆ ೬೦ ಮೈಲಮಲೆ
೨೨ ನಡುಮಲೆ ೬೧ ಹೂಜುಮಲೆ
೨೩ ನಾಗಮಲೆ ೬೨ ವಸಂತಮಲೆ
೨೪ ನಾದಮಲೆ ೬೩ ಆದಿಮಾದೇಶ್ವರಮಲೆ
೨೫ ದೀಪಮಲೆ ೬೪ ಪೊಂಗಮಲೆ
೨೬ ಎದುರುಪೋಳಿಮಲೆ ೬೫ ಗೋವಿಂದಪಾಡಿಮಲೆ
೨೭ ಕಂಬಮಲೆ ೬೬ ವಂದೇಶ್ವರಮಲೆ
೨೮ ಊರಬಸಪ್ಪಮಲೆ ೬೭ ನಾಂದಳ್ಳಿಮಲೆ
೨೯ ಕೋಡುಗಲ್ಲಮುನಿಯಪ್ಪ ಮಲೆ ೬೮ ಭ್ರಹ್ಮೇಶ್ವರ ಮಲೆ
೩೦ ತವನರೆಮಲೆ ೬೯ ವೀರೇಶ್ವರ ಮಲೆ
೩೧ ಕಾರಯ್ಯನಮಲೆ ೭೦ ಶೇಷಣ್ಣ ಒಡೆಯರ ಮಲೆ
೩೨ ಬಿಲ್ಲಯ್ಯನಮಲೆ ೭೧ ಅಂತರಗಂಗಮಲೆ
೩೩ ಪಾದದರೆಮಲೆ ೭೨ ಆನೆಗುಂಜಿಮಲೆ
೩೪ ಮೈಲಮಲೆ ೭೩ ಒಡೆಯರ ಕಲ್ಲುಮಲೆ
೩೫ ಶ್ರವಣನಬಿಳಿಮಲೆ ೭೪ ಸಂತಕಾನಿ ಮುನಿಯಪ್ಪಮಲೆ
೩೬ ರಂಗಸ್ವಾಮಿಮಲೆ ೭೫ ಮಲ್ಲೇಶ್ವರಮಲೆ
೩೭ ಕಂಬಳಸಿದ್ದೇಶ್ವರ ಮಲೆ ೭೬ ಶ್ರವಣಬೋಳಿ ತೊತ್ತಮಲೆ
೩೮ ವಜ್ರಮಲೆ ೭೭ ಭದ್ರಮಲೆ
೩೯ ದೇವರಮಲೆ